ನಿಧನ; ಹೆಚ್1ಎನ್1 ಮಾರಿಗೆ ಬಲಿಯಾದ್ರು ಖಡಕ್ ಆಫಿಸರ್ ಹೆಚ್1ಎನ್1 ರೋಗಕ್ಕೆ ತುತ್ತಾಗಿ ಹೃದಯ ಭಾಗಗಳಿಗೆ ಹಾನಿ ಮಾಡಿಕೊಂಡಿದ್ದ ಮಧುಕರ್ ಶೆಟ್ಟಿ ಕಳೆದ 10 ದಿನಗಳಿಂದ ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೈದರಾಬಾದ್(ಡಿ. 28): ಹಲವು ದಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಇಂದು ನಿಧನರಾದರು. ಇಲ್ಲಿಯ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಇಂದು ರಾತ್ರಿ 8:30 ಗಂಟೆ ಸುಮಾರಿಗೆ ಮಧುಕರ್ ಅವರು ಕೊನೆಯುಸಿರೆಳೆದರು.ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆ ಮಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ಮಧುಕರ್ ಶೆಟ್ಟಿ ಅವರಿಗೆ ಮೊನ್ನೆ ಹೃದಯ,
ಶ್ವಾಸಕೋಶ ಆಪರೇಷನ್ ನಡೆಸಲಾಗಿತ್ತು. ಇದರಿಂದ ಕೆಲ ಹೊತ್ತು ಚೇತರಿಸಿಕೊಂಡಿದ್ದರು. ಆದರೆ ಮತ್ತೊಮ್ಮೆ ಹೃದಯ, ಶ್ವಾಸಕೋಶ ಯಂತ್ರ ಬದಲಾಯಿಸುವ ಪ್ರಯತ್ನಗಳು ವಿಫಲಗೊಂಡಿತ್ತು. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿತ್ತು. ಅವರನ್ನು ಉಳಿಸುವ ಸಕಲ ಪ್ರಯತ್ನಗಳು ನಡೆಯುತ್ತಿದ್ದು, ಕೆಲವು ಗಂಟೆಗಳ ನಂತರ ಐಪಿಎಸ್ ಅಧಿಕಾರಿಯನ್ನು ECMO ಸಿಸ್ಟಂಗೆ ಬದಲಿಸಿಕೊಳ್ಳಲಾಗಿತ್ತು.
ಎಚ್1ಎನ್1 ಇಂದ ಬಳಲುತ್ತಿದ್ದ ಮಧುಕರ್ ಶೆಟ್ಟಿ ಅವರ ಹೃದಯ ಕವಾಟದಲ್ಲಿ ಹೆಚ್ಚು ಹಾನಿಯಾಗಿರುವುದರಿಂದ ಇತರ ಅಂಗಗಳಿಗೆ ರಕ್ತ ಚಲನೆ ಸರಿಯಾಗಿ ಆಗುತ್ತಿರಲಿಲ್ಲ.ಮಧುಕರ್ ಶೆಟ್ಟಿ ಅವರ ಮೃತದೇಹವನ್ನು ಶನಿವಾರ ಬೆಂಗಳೂರು ಅಥವಾ ಮಂಗಳೂರಿಗೆ ಕರೆತರುವ ಸಾಧ್ಯತೆ ಇದೆ.ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ರಾಜ್ಯದ ಐಪಿಎಸ್ ಅಧಿಕಾರಿ ವಿ.ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಧುಕರ್ ಶೆಟ್ಟಿ ಅವರ ಪರಿಸ್ಥಿತಿ ಗಂಭೀರವಾಗಿದ್ದರೂ ಸಾವಿನೊಂದಿಗೆ ಹೋರಾಡಿ ಜಯಿಸುವರೆಂದೇ ನಂಬಿದ್ದೆ. ಅತ್ಯುತ್ತಮ ಅಧಿಕಾರಿಯಾಗಿದ್ದ ಅವರು ನೇರ ನಡೆನುಡಿಗಳಿಂದ ಜನಪ್ರಿಯರಾಗಿದ್ದರು. ಅವರ ಅಕಾಲಿಕ ನಿಧನ ತೀವ್ರ ಆಘಾತ ಉಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದು
ಪ್ರಾರ್ಥಿಸುವುದಾಗಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಗೃಹ ಸಚಿವ ಎಂ.ಬಿ.ಪಾಟೀಲ್ ಸಂತಾಪ:
ವಿ.ಮಧುಕರ್ ಶೆಟ್ಟಿ ಅವರ ನಿಧನಕ್ಕೆ ನೂತನ ಗೃಹ ಸಚಿವ ಎಂಬಿ ಪಾಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದಕ್ಷ, ಪ್ರಾಮಾಣಿಕ,ಅತ್ಯುತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮಧುಕರ ಶೆಟ್ಟಿ ಅವರ ಅಕಾಲಿಕ ನಿಧನ ತೀವ್ರ ಆಘಾತ ಉಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ
ನೀಡಲಿ ಹಾಗೂ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ.
ದಕ್ಷ ಅಧಿಕಾರಿಯ ಹೆಜ್ಜೆ ಗುರುತುಗಳು:
1999ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ಅವರು ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಮಧುಕರ್ ಶೆಟ್ಟಿ ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿ ಎಂಬ ಹೆಸರನ್ನ ಜನಸಾಮಾನ್ಯರಿಂದ ಗಳಿಸಿರುವ
ಅಧಿಕಾರಿ.ಮಧುಕರ್ ಶೆಟ್ಟಿ ಈ ಹಿಂದೆ ಚಿಕ್ಕಮಗಳೂರು ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಡಿಸಿ ಹರ್ಷ ಗುಪ್ತ ಜತೆಗೂಡಿ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತಿದ್ದರು. ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ನಂತರ ಆ ಹಳ್ಳಿಯ ಹೆಸರನ್ನು ‘ಗುಪ್ತಶೆಟ್ಟಿ’ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು. ಈಗಲೂ ಆ ಹಳ್ಳಿಯಲ್ಲಿರುವ ನೂರಾರು ಮಂದಿ ಮಧುಕರ್ ಶೆಟ್ಟಿ ಅವರು
ಮಾಡಿದ ಕೆಲಸವನ್ನು ನೆನೆಯುತ್ತಾರೆ.ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಶ್ ಹೆಗಡೆ ವಿರುದ್ಧ ಬೇಸರಗೊಂಡು ಉನ್ನತ ವಿದ್ಯಾಭ್ಯಾಸದ ರಜೆಯ ಮೇಲೆ ಮಧುಕರ್ ಶೆಟ್ಟಿ 2011ರಲ್ಲಿ ತೆರಳಿದ್ದರು. ಅದಾಗಿ ಬರೋಬ್ಬರಿ ಐದು ವರ್ಷಗಳ ಕಾಲ ಮಧುಕರ್ ಶೆಟ್ಟಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಬಹಿರಂಗವಾಗಿಯೇ ಸಂತೋಷ್ ಹೆಗಡೆ ಅವರ
ಮೇಲೆ ಅಸಮಾಧಾನವನ್ನು ಹೊರ ಹಾಕಿದ್ದರು. ಸಂತೋಷ್ ಹೆಗಡೆ ಕೆಲ ವಿಚಾರಗಳಲ್ಲಿ ತಾರತಮ್ಯ ಮಾಡುತ್ತಿದ್ದರು ಎಂಬ ಗಂಭೀರ ಆರೋಪವನ್ನು ಮಧುಕರ್ ಶೆಟ್ಟಿ ಮಾಡಿದ್ದರು.ನಂತರ ಐಜಿಪಿಯಾಗಿ ಬಡ್ತಿ ಪಡೆದ ಅವರು ಕೆಲ ಕಾಲ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ
ನಿರ್ವಹಿಸುತ್ತಿದ್ದರು.ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಮತನಾದ ಮಧುಕರ್ ಶೆಟ್ಟಿ ಹಲವು ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ವೀರಪ್ಪನ್ ಬಂಧನಕ್ಕೆ ರಚಿಸಿದ್ದ ಸ್ಪೆಷಲ್ ಟ್ಯಾಸ್ಕ್ ಫೋರ್ಸ್ನಲ್ಲೂ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ನ್ಯೂಯಾರ್ಕ್ನ ವಿವಿಯೊಂದರಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಪಿಹೆಚ್ಡಿ ಪಡೆದಿದ್ದ ಅವರು 2017ರ ಮಾರ್ಚ್ನಲ್ಲಿ ಹೈದರಾಬಾದ್ನ ಐಪಿಎಗೆ ಸೇರ್ಪಡೆಗೊಂಡಿದ್ದರು.